Thursday, November 28, 2013

ಬೆಳಗಾವಿ : ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಜನ್ಮತಳೆದ ಸುವರ್ಣ ಸೌಧದ ಎದುರು ಅಮಾಯಕ ರೈತನ ಬಲಿ ನಡೆದಿದೆ. ಅಷ್ಟಕ್ಕೂ ರಾಜ್ಯದಲ್ಲಿ ರೈತರ ವಿರುದ್ಧ ನಡೆಯುತ್ತಿರುವುದಾದರೂ ಏನು?

ಹೌದು... ಹಸಿರು ಕ್ರಾಂತಿಯ ಆರಂಭದಲ್ಲಿ ಹಸನ್ಮುಕಿಯಾಗಿದ್ದ ರೈತ ನಂತರದ ದಿನಗಳಲ್ಲಿ ಏಕೆ ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಿದ್ದಾನೆ ಎಂದು ಒಮ್ಮೆ ಅವಲೋಕಿಸಿದರೆ ಸಿಗುವ ಉತ್ತರ ಬಂಡವಾಳ ಶಾಹಿಗಳ ಕೀಯಂತೆ ಕುಣಿಯುತ್ತಿರುವ ಆಡಳಿತಗಾರರು ಎಂಬುದು ಸ್ಪಷ್ಟವಾಗುತ್ತದೆ. ಉತ್ಪಾದನೆ ಹೆಚ್ಚಿಸುವ ದೃಷ್ಠೀಯಿಂದ ಆರಂಭಗೊಂಡ ಹಸಿರುಕ್ರಾಂತಿ ಬರಬರುತ್ತ ರೈತರ ಜೀವಕ್ಕೆ ಎರವಾಗ ತೊಡಗಿತು. ಸಾವಯವ ಕೃಷಿಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದ ರೈತರು ಬರಬರುತ್ತ ರಸಗೊಬ್ಬರಗಳ ಮೇಲೆ ಅವಲಂಬಿತರಾಗತೊಡಗಿದರು. ಜತೆಗೆ ವಿವಿಧ ರೀತಿಯ ಸವಲತ್ತುಗಳನ್ನು ಬಳಸಿಕೊಳ್ಳುವ ನೆಪದಲ್ಲಿ ಸಾಲಗಾರರು ಆದರು. ಈ ರೀತಿಯ ಸಾಲದ ಸುಳಿಯಲ್ಲಿ ಸಿಕ್ಕ ರೈತ ತನ್ನ ಅಹವಾಲನ್ನು ಆಡಳಿತಗಾರರ ಮುಂದೆ ಮಂಡಿಸಿದರು ಯಾವ ಸರ್ಕಾರಗಳು ಅವರ ನೆನವಿಗೆ ಬರಲಿಲ್ಲ. ಅವರು ಎಂದು ಸಹ ತನ್ನನ್ನು ಸಾಲ ಮುಕ್ತನನ್ನಾಗಿ ಮಾಡು ಎಂದು ಬೇಡಿಕೊಂಡವರಲ್ಲ, ಸರ್ಕಾರಗಳಿಗೆ ತಮ್ಮ ಬೆಳೆ ಬೇಯಿಸಿಕೊಳ್ಳಲು ಸಾಲ ಮನ್ನಾ ಮಾಡಿವೆ ಅಷ್ಟೇ.  ಪ್ರಕೃತಿಯೊಡನೆ ಜೂಜಾಡುವ ಅವನ ಕಷ್ಟ ಅವನಿಗೆ ಮಾತ್ರ ಗೊತ್ತು. ರೈತರ ಮಕ್ಕಳು ಎಂದು ಹೇಳಿಕೊಳ್ಳುವ ಆಡಳಿತಗಾರರು ರೈತರು ಅರ್ಜಿ ಹಿಡಿದು ಬಂದಾಗ ಹವಾನಿಯಂತ್ರಿಕ ರೂಮಿನೊಳಗೆ ಕುಳಿತು ಮಾಯಾಪೆಟ್ಟಿಗೆಯನ್ನು ವೀಕ್ಷಿಸುವುದರಲ್ಲಿ ಬ್ಯೂಸಿಯಾಗಿರುತ್ತಾರೆ. ಕಾರಣ  ಇಷ್ಟೇ ಅಧಿಕಾರದ ಮದ ನೆತ್ತಿಗೆರಿರುವುದರಿಂದ. ( ಲಾಲ್ ಬಹದ್ದೂರ ಶಾಸ್ತ್ರಿ  ಅವರನ್ನು ಬಿಟ್ಟು)
ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳುವ ಎಲ್ಲಾ ಪಕ್ಷಗಳು ಎಂದಿಗೂ ಸಹ ಅವನ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಒಂದು ವೇಳೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ವಿಷಯಗಳೆ ಇಲ್ಲದೆ ತಮ್ಮ ಪಕ್ಷಗಳು  ಅಧಿಕಾರಕ್ಕೆ ಬರದಿದ್ದರೆ ಎಂಬ ಚಿಂತೆ ಅವರಿಗೆ.

ವೈಜ್ಞಾನಿಕ ಬೆಲೆ ನೀಡಲು ಆಗದವರು ಅಧಿಕಾರದಲ್ಲಿರಬೇಕೆ? : ರೈತರ ಬೆಳೆಗಳಿಗೆ ಪೂರಕ ಬೆಂಬಲ ನೀಡಲು ಆಗದಿದ್ದವರು ಅಧಿಕಾರದಲ್ಲಿರಬೇಕೆ ಎಂಬ ಪ್ರಶ್ನೆಗೆ ಇನ್ನೂವರೆಗೂ ಉತ್ತರ ಸಿಕ್ಕಿಲ್ಲ. ಸಿಗುವುದು ಇಲ್ಲ ಎಂದು ಅನಿಸುತ್ತಿದೆ. ಈಗಾಗಲೇ ಸಾಕಷ್ಟು ಫಲವತ್ತಾದ ಭೂಮಿ ಬಂಡವಾಳ ಶಾಹಿಗಳ ಕೈ ಸೇರಿ, ಕೃಷಿ ಉತ್ಪಾದನೆ ನೆಲಕಚ್ಚಿದ್ದು, ಇರುವ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗೆ ಬೆಲೆ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೂ ಸಹ ಆಳುವ ಸರ್ಕಾರಗಳು ಈ ಬಗ್ಗೆ ಕಿಂಚಿತ್ತು ತಲೆ ಕೆಡಿಸಕೊಂಡಿಲ್ಲ.

ಕೈಗಾರಿಕೆಗೆ ರಿಯಾಯ್ತಿ : ರೈತರಿಗೆ ಪಂಚಾಯ್ತಿ : ಕಳೆದ ಕೆಲ ವರ್ಷಗಳಿಂದ ಈಚೆಗೆ ಕೈಗಾರಿಕೊದ್ಯಮಿಗಳನ್ನು ಆಕರ್ಷಿಸಲು ಭಾರಿ ಕಸರತ್ತು ನಡೆಸಿರುವ ಸರ್ಕಾರಗಳು ಅವರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿವೆ. ಆದರೆ ಅದೇ ನಮ್ಮ ನಾಡಿನ ಬೆನ್ನಲೆಬಾಗಿರುವ ರೈತನಿಗೆ  ಬೆಲೆ ನೀಡಲು ಸತಾಯಿಸುತ್ತವೆ. ಯಾಕೆ ಹೀಗೆ ಎಂದು ನೋಡಿದರೆ ಮತ್ತೆ ಸಿಗುವ ಉತ್ತರ  ಕೈಗಾರಿಕೆಗಳಿಂದ ಬರುವ ಕಪ್ಪು ಹಣ. ಹೌದು. ಇದು ಕೇವಲ  ಆರೋಪವಲ್ಲ ಬದಲಾಗಿ ಕಟು ಸತ್ಯ. ಸಕ್ಕರೆ ಕಾರ್ಖಾನೆಗಳ ನೀಡಬೇಕಾಗಿದ್ದ ತೆರಿಗೆಯನ್ನು ಸಹ ಮನ್ನಾ ಮಾಡಿರುವ ಆಡಳಿತಗಾರರು ಅವರಿಂದ ಬರಬೇಕಾಗಿದ್ದ ತೆರಿಗೆಯಲ್ಲಿನ ಶೇ 50% ರಷ್ಟನ್ನು ತಮ್ಮ ಖಾತೆಗೆ ಜಮಾಮಾಡಿಕೊಂಡಿದ್ದಾರೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಖೋತಾ ಆಗುವ ಜತೆಗೆ ಕೈಗಾರಿಕೊದ್ಯಮಿಗಳು ಕೋಟಿಗಟ್ಟಲೇ ಲಾಭ ಮಾಡಿಕೊಂಡಿದ್ದಾರೆ.

ಲೇಖನ ಅಷ್ಟು ಚೆನ್ನಾಗಿಲ್ಲ ಆದ್ಗರಿಂದ ಮತ್ತೆ ಮುಂದುವರೆಯುವುದು ....